Monday, 20 August 2018

ತೆರೆದ ಬಾಗಿಲು

ಇರುಳೆಲ್ಲೆಡೆಯಿತ್ತು, ಇರಬಹುದು ಕತ್ತಲೆಂದು ಕಣ್ಣು
ತೆರೆದು ನೋಡಿದರೆ ಮುಚ್ಚಿತ್ತು ಬಾಗಿಲು

ತೆರೆದರೆ ಬಾಗಿಲ ಬರಬಹುದು ಬೆಳಕೆಂದು 
ಮೆಲ್ಲನೆದ್ದು ತೆರೆದೆ ನಾ ಬಾಗಿಲು

ಕತ್ತಲು ತಿಳಿಯಾದರೂ ಪೂರ್ತಿ ಹೋಗಿರಲಿಲ್ಲ 
ನೋಡಿದರೆ ಮುಚ್ಚಿತ್ತು ಮುಂದಿನ ಬಾಗಿಲು 

ನಡೆಯದೆ ಗತ್ಯಂತರವಿಲ್ಲ, ತೆರೆಯದೇ ಬೆಳಕಿರಲಿಲ್ಲ 
ಕೊನೆಗೂ ತೆರೆದೇ ಒಂದರ ನಂತರದೊಂದ ಬಾಗಿಲು 

ಈಗ ಎಲ್ಲೆಡೆ ಬೆಳಕು...
ಒಳಗೂ ಹೊರಗೂ, ನನ್ನೊಳಗೂ ನನ್ಹೊರಗೂ 
ತಂಪಾದ ಗಾಳಿ, ನಿರರ್ಗಳವಾದ ಕೊಳಲು 
ಎಲ್ಲೆಡೆ ಹರಡಿತ್ತು ನಿರ್ಮಳವಾದ  ಮುಗಿಲು 

ಜೈಲು ಉದ್ಯಾನ

An independence day afterthought!
Let every jail turn into a park, where;
birds make their nest freely
flowers bloom beatifully
leaves shine brightly
sunlight beams gently
smiles float across souls
energy flows softly
where not just humans but thoughts stroll lovingly.
ಪ್ರತಿ ಜೈಲು ಉದ್ಯಾನವನವಾಗಲಿ. ಇಲ್ಲಿ;
ಹಕ್ಕಿಗಳು ಗೂಡು ಕಟ್ಟಲಿ ಸ್ವಚ್ಚಂದವಾಗಿ
ಹೂಬಿರಿದು ನಗಲಿ ಸುಂದರವಾಗಿ
ಚಿಗುರೆಲೆಗಳು ಬೆಳೆಯಲಿ ಬಿರುಸಾಗಿ
ಸೂರ್ಯರಶ್ಮಿಯು ಬುವಿಮುಟ್ಟಲಿ ನವಿರಾಗಿ
ನಗು ಹರಿಯಲಿ ಮನಮನದಲ್ಲೂ ಸವಿಯಾಗಿ
ಚೈತನ್ಯ ಚಿಮ್ಮಲಿ ಜೀವಜೀವದಲ್ಲೂ ಪ್ರಖರವಾಗಿ
ಇಲ್ಲಿ ಜೀವಗಳಷ್ಟೇ ಅಲ್ಲ, ಪ್ರತಿ ಯೋಚನೆಯೂ ನಡೆದಾಡಲಿ ಸಲೀಸಾಗಿ.

ದಯೆ

Poem by Najwa Zebian -
may your heart
always be kind
even though
the world out there
could shatter you
for being kind.
it is kindness that makes you
brave.
ನಿನ್ನೆದೆ ಎಂದೆಂದಿಗೂ ಮಿಡಿಯಲಿ.
ಛ್ಹಿಧ್ರಗೊಳಿಸಬಹುದು ಅಲ್ಲಿರುವ ಪ್ರಪಂಚ
ನಿನ್ನೀ ದಯೆಗಾಗಿ.
ನೀನು ಸಾಹಸಿ ಈ ದಯೆಯಿಂದಲೇ.

My eyes want to be your home
If you could see yourself through my eyes,
you would never want to be seen by anyone else.

ನನ್ನ ಕಂಗಳಿಗೆ ನಿನ್ನ ಮನೆಯಾಗುವ ಬಯಕೆ 
ನೀನು ನಿನ್ನನ್ನು ನನ್ನ ಕಂಗಳಿಂದ ನೋಡಹತ್ತಿದರೆ 
ನೀನು ಎಂದೆಂದಿಗೂ ನಿನ್ನನ್ನು ಬೇರೆ ಕಂಗಳಿಂದ ನೋಡ ಬಯಸಲಾರೆ.

ಬಯಕೆ

My eyes want to be your home.
If you could see yourself
through my eyes,
you would never want to
be seen by anyone else.
- A poem by Najwa Zebian. Translated in Kannada.
ನನ್ನ ಕಂಗಳಿಗೆ ನಿನ್ನ ಮನೆಯಾಗುವ ಬಯಕೆ.
ನಿನ್ನನ್ನು ನೀನು ನನ್ನ ಕಂಗಳಿಂದ ನೋಡಹತ್ತಿದರೆ
ನೀನು ಎಂದೆಂದಿಗೂ ನಿನ್ನನ್ನು
ಬೇರೆ ಕಂಗಳಿಂದ ನೋಡ ಬಯಸಲಾರೆ.

ಹೂದಾನಿ

ಕುಳಿತಿರುವೆ ನಾ ನಿನ್ನ ನಿರೀಕ್ಶೆಯಲ್ಲಿ ಪ್ರಿಯೆ, ಕೇಳುತ್ತಿಲ್ಲವೆ ನನ್ನ ದನಿ
ಚಿಗುರಿಸು ಕುಡಿಯ, ಮೂಡಿಸು ಹೂ ಗುಚ್ಛ 
ಮಾಡು‌ ನೀ ನನ್ನ ಹೂದಾನಿ

Sunday, 1 July 2018

ನೆನಪುಗಳೇ ಇಲ್ಲದ ಬಾಳು

ಚಿಲಕವಿಲ್ಲದ ಬಾಗಿಲನು
ಬಡಿಬಡಿದು ತೆರೆಯಲಾದೀತೇ?
ಗಂಟಿಲ್ಲದ ಬುತ್ತಿಯನು
ತಿರುತಿರುಚಿ ಬಿಚ್ಚಲಾದೀತೇ?
ನೂಲೇ ಇಲ್ಲದೆ ಹೆಣೆದ ಬಲೆಯನ್ನು
ಅಡ್ಡಡ್ಡಲಾಗಿ ಹರಿಯಲಾದೀತೇ?
ನೆನಪುಗಳೇ ಇಲ್ಲದ ಬಾಳನ್ನು
ಕೆದಕೆದಕಿ ಕೆಣಕಲಾದೀತೇ???

ಯುಧ್ಧ - ಅಪರಾಜಿತರು


ನನ್ನ ಮುಂಜಾನೆಯ ವೇಗದ ನಡಿಗೆ ಇಂದು ಸ್ವಲ್ಪ ಹಿನ್ನಡೆದಿತ್ತು. ನಿನ್ನೆ ಸಂಜೆಯ ಮಳೆಯಿಂದಲೋ ಏನೋ ರಾತ್ರಿಯಿಡಿ ಚಳಿಯಿತ್ತು. ಬೆಳಗ್ಗೆ ಮುಸುಕು ಹಾಕಿಕೊಂಡ ಸೂರ್ಯ ಮಲಗೇ ಇದ್ದ, ಹೊರಗೆ ಬರಲೇ ಇಲ್ಲ. ಹಾಗಾಗಿ ನನಗೆ ಅಲಾರಾಂ ಆಗಿದ್ದು, ನಾನದನ್ನು ಸುಮ್ಮನಾಗಿಸಿದ್ದು ನನಗೆ ತಿಳಿಯಲೇ ಇಲ್ಲ. ಎದ್ದಾಗ ಏಳು ಮೂವತ್ತು. ಹಾಸಿಗೆಯಲ್ಲೇ ಕುಳಿತು, ಇಂದು ವಾಲ್ಕಿಂಗ್ ಬೇಡ ಎಂದು ಹೃದಯ ಹೇಳಿದಾಗ, ಮೆದುಳಿನ ಅಲಾರಾಂ ಹೊಡೆದು, ಇಲ್ಲ ನೀನು ಹೋಗಲೇ ಬೇಕು, ಹದಿನೈದು ನಿಮಿಷವಾದರೂ ಹೋಗಬೇಕು. ನೋಡು ನಿನ್ನ ಹೊಟ್ಟೆಯನ್ನು, ಹೇಗೆ ನಿನ್ನ ಆಲಸ್ಯವನ್ನು ಜಗಕ್ಕೆಲ್ಲ ತಿಳಿಸುತ್ತಿದೆ! ನಿನ್ನೆ ನೀನು ನಾಲ್ಕನೆಯ ಮಹಡಿ ಮೆಟ್ಟಿಲಿಂದ ಏರುತ್ತಿದಾಗ, ನಿನ್ನ ಕಾಲುಗಳು ಕೈಕೊಟ್ಟಿರಲಿಲ್ಲವೇ? ಏಳು ಎದ್ದೇಳು ಹೊಟ್ಟೆ ಇಳಿಯುವವರೆಗೂ ನಡೆಯುತ್ತಿರು... ಎಂದು ವಿವೇಕಾನಂದರೇ ಬಂದು ಎಚ್ಚರಿಸಿದಂತಾಯಿತು. ಇನ್ನು ಸರ್ವಜ್ಞನೇ ಬಂದು ಎಚ್ಚರಿಸುವ ಮುನ್ನ ನಾನು ಏಳುವುದೇ ಲೇಸೆಂದು ದಡಬಡನೆ ನನ್ನ ಪ್ರಾತರ್ವಿಧಿಯನ್ನು ಮುಗಿಸಿ, ಮರುನಿಮಿಷದಲ್ಲೇ ಶೂಸಿನ ಲೇಸನ್ನು ಕಟ್ಟಿ ಸಿದ್ಧನಾದೆ.


ಎಂದಿಗಿಂತ ಗದ್ದಲ ಸ್ವಲ್ಪ ಹೆಚ್ಚೇ ಇದ್ದಂತೆ ತೋರಿತು ನಾನು ನಡೆಯುವ ರೋಡ್ ನಲ್ಲಿ! ಆಗಲೇ ಹೊತ್ತಾಗಿತ್ತಲ್ವೇ ಮನೆಯಿಂದ ಹೊರಬಿದ್ದಾಗ! ಶಿರಸ್ತ್ರಾಣ ಧರಿಸಿದ ಎಷ್ಟೋ ಜನ ಸೈನಿಕರಂತೆ ಒಬ್ಬರ ಹಿಂದೊಬ್ಬರು ತಮ್ಮ ಕುದುರೆಗಳಲ್ಲಿ, ರಥಗಳಲ್ಲಿ ಬಿರಬಿರನೆ ಹೋಗುತ್ತಿದ್ದರು. ಆದರೆ ಸಲ ಎಲ್ಲ ಸವಾರರು ತಮ್ಮ ಸಮವಸ್ತ್ರ ತೊಟ್ಟಿರಲಿಲ್ಲ, ಕೆಲವರಷ್ಟೇ! ಅವರ ಹಿಂಬಾಗದಲ್ಲಿ ಅಥವಾ ಬದಿಯಲ್ಲಿ ಸಲ ಸಮವಸ್ತ್ರ ಧರಿಸಿದ್ದ ಪುಟ್ಟ ಸೈನಿಕರಿದ್ದರು. ಅವರ ಹಿಂಬದಿಯಲ್ಲಿ ಪಕ್ಕದಲ್ಲಿ ದೊಡ್ಡ ಚೀಲಗಳಿದ್ದವು. ಅವುಗಳಲ್ಲಿ ಗನ್ನು ಬಾಂಬುಗಳು ಇದ್ದಿರಬೇಕು! ಕೆಲವೊಂದು ಚೀಲಗಳಂತೂ ದೊಡ್ಡದೂ, ಭಾರವೂ ಇದ್ದಿತು. ನನಗಂತೂ ಇವುಗಳನ್ನು ಕಂಡು ದಿಗಿಲಾಯಿತು. ಇವೇನು ಮಾರಾಕಾಸ್ತ್ರಗಳೋ? ಮತ್ತೆ ಅಂತರ್ಯುದ್ಧವೇನಾದರೂ ಶುರುವಾಗಿದೆಯೋ? ನಮ್ಮ ಭೂತ ಪೂರ್ವ ಪ್ರಧಾನಿಯೊಬ್ಬರನ್ನು ಇಂತಹದೇ ಚೀಲ ಹಿಡಿದು ಕನ್ನಡಕ ಧರಿಸಿದ ಸ್ತ್ರೀಯೊಬ್ಬಳು ಬಾಂಬು ಸಿಡಿಸಿ ಕೊಂದ ಘಟನೆ ಕಣ್ಣೆದುರಿಗೆ ಬಂದು ಎದೆ ಝಲ್ಲೆಂದಿತು!  ಇವರೇನಾದರೂ  ನನ್ನನ್ನು ಪ್ರಧಾನಿಯೆಂದುಕೊಂಡು ಬಿಟ್ಟರೆ? ಎಲ್ಲ ಕಡೆಯಿಂದ ಸವಾರರು ನನ್ನೆಡೆಗೇ ಬರುವುದು ಕಂಡು, "ನಾನು ಪ್ರಧಾನಿಯೂ ಅಲ್ಲ, ರಾಷ್ಟ್ರಾಧ್ಯಕ್ಷನೂ ಅಲ್ಲ. ಈ ಜನ್ಮದಲ್ಲಿಯೇ ಏನು, ಇನ್ನು ಮುಂದಿನ ಏಳೇಳು ಜನ್ಮದಲ್ಲೂ ಹಾಗೇನು ಆಗುವ ಬಯಕೆಯೂ ಇಲ್ಲ" ಎಂದು ಜೋರಾಗಿ ಕಿರುಚಿ ಹೇಳೋಣವೆಂದು ತೋರಿತು. ಆಗಲೇ ಒಂದು ಕುದುರೆಯ ಹಿಂಬದಿಯಲ್ಲಿ ಕುಳಿತಿದ್ದ ಪುಟ್ಟ ಸವಾರನೊಬ್ಬನು ನನ್ನ ಕಡೆ ತಿರುಗಿ ಮುಗುಳ್ನಕ್ಕನು. ಬಾಯಿಗೆ ಬಂದ ಜೀವ ಮತ್ತೆ ಸ್ವಸ್ಥಾನ ಸೇರಿತು.

ಎಲ್ಲ ಸವಾರರು ತಮ್ಮ ಪುಟ್ಟ ಸಹ ಸವಾರರನ್ನು ತಮ್ಮ ವಾಹನಗಳಿಂದ ಇಳಿಸಿ ಒಂದು ದೊಡ್ಡ ಗೇಟ್ ನೊಳಗೆ ಕಳಿಸಿ ಕೊಡುತ್ತಿದ್ದರು. ಒಬ್ಬರನ್ನು ನಿಲ್ಲಿಸಿ ಕೇಳಿದೆ, "ಏನು ನಡೆಯುತ್ತಿದೆ ಇಲ್ಲಿ?" ಅವನೋ ನನ್ನ ಸೋದರ ಸಂಭಂದಿಯಂತೆ ನಗುತ್ತ, "ಹೇ, ನಿನಗೆ ನೆನಪಿಲ್ಲವೇ? ಮೊನ್ನೆ ಸಿಕ್ಕಿದ್ದೆವಲ್ಲ ರಸ್ತೆಯಲ್ಲಿ ಆಫೀಸ್ಗೆ ಹೋಗುತ್ತಾ ಇರುವಾಗ. ಹೇಗಿದ್ದಿ ಗೆಳೆಯ?" ಅಂದ. ನಾನು "ಹೊ ಹೌದಲ್ಲವೇ! ನಾನು ಚೆನ್ನಾಗಿದ್ದೇನೆ. ನೀವು?" ಎಂದೆ. ಅವನು ಹೇಳಿದ, "ನಾನು ಚೆನ್ನಾಗಿದೀನಿ. ನೀನು ಏನು ನಡೆಯುತ್ತಿದೆಯೆಂದು ಕೇಳಿದಿಯಲ್ಲವೇ? ಇಲ್ಲಿ ನಡೆಯುತ್ತಿರುವುದು ತರಬೇತಿ. ಯುದ್ಧಕ್ಕೆ."
ನನ್ನ ಮುಖ ಮತ್ತೆ ಕಳೆಗುಂದಿತು. ಹೌದು, ಹಾಗಿದ್ದಲ್ಲಿ ನಾನು ಹಾಕಿದ ಲೆಕ್ಕ ಸರಿಯಾಗೇ ಇದೆ. ಇವತ್ತಲ್ಲದಿದ್ದಲ್ಲಿ ನಾಳೆ ಮೂರನೇ ಮಹಾಯುದ್ಧ ನಡೆದೇ ನಡೆಯುತ್ತದೆ. ಅದಕ್ಕೆ ಇರಬೇಕು ತರಬೇತಿ. ಅವನಂದ, "ಗೆಳೆಯ, ನೀನು ಅಂದು ಕೊಂಡಂತೆ ಮಹಾಯುದ್ಧಕ್ಕಲ್ಲ ತರಬೇತಿ, ಇದು ದೈನಂದಿನ ಯುದ್ಧಕ್ಕೆ. ನಮ್ಮ ದೈನಂದಿನ ಯುದ್ಧಕ್ಕೆ ಇಲ್ಲಿ ತರಬೇತಿ ಪಡೆದು ಸರ್ಟಿಫಿಕೇಟ್ ಗಿಟ್ಟಿಸಿ ಕೊಳ್ಳದಿದ್ದಲ್ಲಿ ಯುದ್ಧ ನಡೆಯುವ ಮುನ್ನವೇ ಪರಾಜಿತರಾದಂತೆ." ನಾನು ಇನ್ನೊಂದು ಪ್ರಶ್ನೆ ಕೇಳುವ ಮೊದಲೇ ಅವನು, "ನಿನಗೂ ಮದುವೆಯಾಗಿ ಮಕ್ಕಳಾದಾಗ ಅರ್ಥವಾಗುತ್ತದೆ ಬಿಡು. ನನಗೆ ನನ್ನ ಇಂದಿನ ಯುದ್ಧಕ್ಕೆ ತಡವಾಗಿದೆ. ಮತ್ತೆ ಸಿಗೋಣ ಗೆಳೆಯ." ಅವನು ಅಂದಷ್ಟೇ ವೇಗದಲ್ಲಿ ತನ್ನ ರಥವೇರಿ ಮಾಯವಾದ

ನಾನೋ ಏನೋ ತಿಳಿದುಕೊಂಡಂತೆ ಒಂದೆಡೆ, ಕಳೆದುಕೊಂಡಂತೆ ಇನ್ನೊಂದೆಡೆ ಜೀವನ ದರ್ಶನವಾದಂತೆ ಪಕ್ಕದ ದರ್ಶಿನಿಯೊಳಗೆ ಹೊಕ್ಕು "ಒಂದು ಪ್ಲೇಟ್ ಇಡ್ಲಿ ವಡೆ" ಎಂದು ಐವತ್ತರ ನೋಟನ್ನು ಕ್ಯಾಷಿರ್ ಮುಂದೆ ಹಿಡಿದೆ.

Wednesday, 7 February 2018

ಜಡಿ ಮಳೆ

ಇದೆಂತಹ ಜಡಿ ಮಳೆ ಇವತ್ತು

ಮಗು ಮಾಡಿದ ರಾಡಿಯನ್ನೆಲ್ಲ
ಅಮ್ಮ ತನ್ನ ಸೆರಗಿನಿಂದ ಒರೆಸಿದಂತೆ

ನಾವು ಮಾಡಿದ ಪಾಪಗಳನ್ನೆಲ್ಲಾ
ಒಂದೇ ಕ್ಷಣದಿ ತೊಳೆದಂತಿತ್ತು 

Tuesday, 9 January 2018

ಕೋಪ

ಓ ನಲ್ಲ, ಏಕೆ ಈ ಕೋಪ?
ನನ್ನಿನಿಯ, ನಾ ನಿನಗಾಗಿ ತಯಾರಾಗಲು
ಕನ್ನಡಿಯೆದುರು ಕಳೆದಿದ್ದು ಬರೀ ಎರಡು ಘಂಟೆಗಳ!
ತೋರಿಸು ನೋಡೋಣ, ಇದೇ ಕೋಪ
ಆ ಚಂದಿರನಿಗೆ, ಅವನೋ ಪೂರ್ತಿ ತಯಾರಾಗಲು
ಕಳೆಯುವುದಿಲ್ಲವೇ ಭುವಿಯೆದುರು ಎರಡು ವಾರಗಳ!

Tuesday, 2 January 2018

ಯುಧ್ಧ - ದೈನಂದಿನ ಯುಧ್ಧ

ರಣರಣ ಬಿಸಿಲು. ಎಲ್ಲರೂ ಶಿಸ್ತಿನ ಸಿಪಾಯಿಗಳಂತೆ ಹೊರಟಿದ್ದರು. ಅದೇ ಗತಿ, ಅದೇ ಚಲನೆ. ನಿಧಾನವಾಗಿ ಮುಂದುವರೆಯುತ್ತಿದ್ದರೂ ಏನೋ ಆತುರದಲ್ಲಿದ್ದಂತೆ ತೋರುತ್ತಿತ್ತು. ಹಲವರು ತಮ್ಮ ಕುದುರೆಗಳನ್ನೇರಿ ಹೊರಟಿದ್ದರೆ, ಇನ್ನೂ ಕೆಲವರು ತಮ್ಮ ರಥಗಳನ್ನೇರಿ ಚಲಿಸುತ್ತಿದ್ದರು. ಹಲವು ಕುದುರೆಗಳಲ್ಲಿ ರಾಜನೊಬ್ಬನೇ ತನ್ನ ಶಿರಸ್ತ್ರಾಣದೊಂದಿಗೆ ಹೋಗುತ್ತಿದ್ದರೆ, ಕೆಲವೊಂದರಲ್ಲಿ ರಾಣಿಯರೂ ಜೊತೆಗಿದ್ದರು.
ಕವಚವನ್ನು ಧರಿಸಿ ನಡೆದಿದ್ದ ಒಬ್ಬ ಕುದುರೆ ಸವಾರನನ್ನು ನಿಲ್ಲಿಸಿ ಕೇಳಿದೆ, "ಎತ್ತಣ ಈ ಓಟ? ಜಾತ್ರೆ ಏನಾದರು ನಡೆಯುತ್ತಿದೆಯೇ?". ಅವನೋ ಬತ್ತಳಿಕೆಯಿಂದ ಬಾಣವನ್ನೇ ತೆಗೆಯದೆ ನನ್ನೆದೆಗೆ ಇರಿಯುವಂತಹ ನೋಟವನ್ನು ಬೀಸಿ ಕೇಳಿದ "ನಿನಗಿದು ಜಾತ್ರೆಯ ಜನಜಂಗುಳಿಯಂತೆ ಕಾಣುತ್ತಿರುವುದೇನು?". ನಾನಂತು ನೂರು ಜನ್ಮಗಳ ಪಾಪವನ್ನು ಒಮ್ಮೆಲೇ ಮಾಡಿದಂತೆ ನನ್ನ ಕಣ್ಣುಗಳನ್ನು ತಗ್ಗಿಸಿದೆ. ಅವನಂದ "ನಾವೆಲ್ಲಾ ಹೊರಟಿರುವುದು ಯುಧ್ಧಕ್ಕೆ". ಅವನ ದನಿ ಗಡುಸಾಗಿತ್ತು.
ನನ್ನೆದೆ ಝಲ್ಲೆಂದಿತು! ಯುಧ್ಧವೇ? ಇಷ್ಟೊಂದು ಜನ ಯಾರ ಮೇಲೆ ದಾಳಿ ಮಾಡಲು ಹೊರಟಿಹರೋ? ಒಂದು ವೇಳೆ ವಿಶ್ವ ಯುಧ್ಧವೇ ಆರಂಭವಾಗಿದ್ದರೆ ನನ್ನ ಗತಿಯೇನು? ನನ್ನ ಜೀವನ ಈಗಷ್ಟೇ ಶುರುವಾಗಿದೆ, ಮಾಡಲು ಬಹಳಷ್ಟಿದೆ.
ಇಬ್ಬರು ಮಕ್ಕಳು, ಒಬ್ಬಳು ಹೆಂಡತಿ.
ಒಂದು ಅಲ್ಲ ಎರಡೋ ಮೂರೋ ಭಡ್ತಿ.
ಟುಬಿಎಚ್ಕೆ ಫ್ಲ್ಯಾಟು, ಒಂದು ಹ್ಯಾಚ್ಬ್ಯಾಕ್ ಕಾರು.
ಹಾ ಹೌದು, ಒಂದು ಸಿಂಗಾಪುರ್ ಟೂರು.
ಇದಕ್ಕಿಂತ ಮುಂಚೆಯೇ ಇಲ್ಲಿ ಪರಮಾಣು ದಾಳಿಯೇನಾದರೂ ನಡೆದರೆ ನಾನೇನಪ್ಪಾ ಮಾಡುವುದು? ಇವರೆಲ್ಲ ಇಷ್ಟು ತರಾತುರಿಯಿಂದ ಸಜ್ಜಾಗಿ ನಡೆಯುತ್ತಿರುವುದನ್ನು ನೋಡುತ್ತಿದ್ದರೆ "ತೀರ್ಮಾನದ ದಿನ" ಬಂದೆ ಬಿಟ್ಟಿತೆಂದು ತೋರುತ್ತದೆ.
ಅವನಿಗೆ ನನ್ನ ಪರಿಸ್ಥಿತಿ ನನ್ನ ಮೋರೆಯಿಂದ ತಿಳಿದಿರಬೇಕು, ಅವನಂದ "ಯುದ್ಧವೆಂದರೆ ವಿಶ್ವಯುದ್ಧವಲ್ಲ. ಇದು ದೈನಂದಿನ ಯುಧ್ಧ. ಇವತ್ತಿನ ನನ್ನ ಯುಧ್ಧ ನನ್ನದೇ ಮಹತ್ವಾಕಾಂಕ್ಷೆಯೊಂದಿಗೆ. ಇವತ್ತು ನನಗೆ ರೇಟಿಂಗ್ ಕೊಡುತ್ತಾರೆ. ನಾನು ಇವತ್ತು ಗೆದ್ದು ಬಿಟ್ಟರೆ ಮುಂದಿನ ಒಂದು ವರ್ಷ ನೆಮ್ಮದಿ. ಇಲ್ಲದಿದ್ದಲ್ಲಿ ಇನ್ನೊಂದು ಯುಧ್ಧ ಶುರು, ಕೆಲಸ ಹುಡುಕುವ ಯುಧ್ಧ".
"ಹೀಗೆಯೇ ಈ ಮಾರ್ಗದಲ್ಲಿರುವ ಪ್ರತಿಯೊಬ್ಬರೂ ಏನಾದರೊಂದು ಯುದ್ಧವನ್ನು ಮಾಡಲೇ ಹೊರಟಿಹರು. ನನ್ನ ಮುಂದಿರುವವನು ತನ್ನ ಬಾಸ್ ನೊಂದಿಗೆ, ಆಗೋ ನೋಡು ನನ್ನ ಪಕ್ಕದಲ್ಲಿರುವವನು ತನ್ನ ಸಹಚರನೊಂದಿಗೆ, ಒಬ್ಬ ತನ್ನ ಭಯದೊಂದಿಗೆ, ಇನ್ನೊಬ್ಬ ತನ್ನ ಸ್ಪರ್ಧೆಯೊಂದಿಗೆ, ಮತ್ತೊಬ್ಬ ತನ್ನ ಮೋಹದೊಂದಿಗೆ. ಹೀಗೆಯೇ ಈ ಮಾರ್ಗದಲ್ಲಿನ ಪ್ರತಿಯೊಬ್ಬರೂ ಪ್ರತಿದಿನ ಏನಾದರೊಂದಿಗೆ ಯುಧ್ಧ ಮಾಡುತ್ತಲೇ ಇರುವರು. ಇದೆ ನಮ್ಮ ಕಾಯಕ".
"ನೀನೋ ಮೊದಲನೇ ದಿನ ಯುಧ್ಧಕ್ಕೆ ಹೊರಟಂತೆ ತೋರುತ್ತಿದೆ. ನೀನು ಈ ಯುಧ್ಧಕ್ಕೆ ಚೆನ್ನಾಗಿ ಅಣಿಯಾಗಿ ಹೋದರೆ ಒಳಿತು. ಆಗೋ ನೋಡು ನನ್ನ ರಣರಂಗ ಅಲ್ಲಿ ಕಾಣಿಸುತ್ತಿದೆ. ನಾನೀಗ ಹೊರಟೆ. ಸಾಯಂಕಾಲ ಮತ್ತೆ ಸಿಕ್ಕಾಗ ನನ್ನ ಇಂದಿನ ಯುಧ್ಧ ಹೇಗಿತ್ತೆಂದು ಹೇಳುತ್ತೇನೆ. ಬೇರೆಯವರ ಕಥೆಯನ್ನೂ ಕೇಳುವಿಯಂತೆ, ಹಾಗೆ ನಿನ್ನ ಕಥೆಯನ್ನು ಹೇಳುವಿಯಂತೆ. ಕೇಳಲು ಬಹಳ ಮಜವಾಗಿರುತ್ತದೆ. ಅವರವರ ಯುಧ್ಧ ಅವರವರಿಗೆ ವಿಶ್ವ ಯುಧ್ಧಕ್ಕಿಂತ ಕಡಿಮೆಯೇನಲ್ಲ."
"ಸಾಯಂಕಾಲ ಮತ್ತೆ ಸಿಗೋಣ. ನನಗೆ ವಿಜಯವಾಗಲಿ ಎಂದು ಆಶೀರ್ವದಿಸು. ನಿನಗೂ ಜಯ ಸಿಗಲಿ, ವೀರ".
- at Bangalore Dairy Circle on a working day!