Sunday, 16 February 2025

ಮಹಾಸ್ಮಶಾನದ ಮೌನ

ಕಾಶಿಯ ಮಣಿಕರ್ಣಿಕಾ ಘಾಟಿನ ಮಹಾಸ್ಮಶಾನದಲ್ಲಿ ಕೆಲವು ಮಜಲುಗಳಿವೆ. ಗಂಗೆಯ ದಡದಲ್ಲಿಯೇ ಕೆಲವು ಮಜಲುಗಳನ್ನು ಮಾಡಿ ಶವಗಳನ್ನು ಸುಡುತ್ತಾರೆ, ದಡದಲ್ಲಿನ ನೆಲ ಮಾಳಿಗೆಯಲ್ಲಿ ಸ್ಮಶಾನವನ್ನು ಕಾಯುವ ರುದ್ರನ ಪುಟ್ಟ ಮಂದಿರವಿದೆ. ಈ ಮಂದಿರದ ಪಕ್ಕ ನಾಲ್ಕು ಮೆಟ್ಟಿಲೇರಿದರೆ ಮೂರು ನಾಲ್ಕು ಜನರು ಕುಳಿತುಕೊಳ್ಳಬಹುದಾದಂತಹ  ಒಂದು ಚಿಕ್ಕ ಮಂಟಪವಿದೆ. ಹಾಗೆಯೇ ಇನ್ನೂ ನಾಲ್ಕು ಮೆಟ್ಟಿಲೇರಿದರೆ ಮೇಲ್ಮಜಲಿನ ಸ್ಮಶಾನವಿದೆ. ನಾನು ನನ್ನ ಮಿತ್ರ ಕೀರ್ತನ್ ಹಾಗೆಯೇ ಸ್ಮಶಾನದ ದರ್ಶನ ಮಾಡುತ್ತಾ ಮೇಲಿನ ಮಹಡಿಯನ್ನು ಹತ್ತುತ್ತಿದ್ದಾಗ ಮಂಟಪದಲ್ಲಿ ಕುಳಿತಿದ್ದ ಸಾಧುವಿನ ಮೇಲೆ ದ್ರಷ್ಟಿ ಹರಿಯಿತು. ಈ ಸಾಧು ಸುಮಾರು ೩೦ರ ಆಸುಪಾಸಿನ ಹೆಂಗಸು. ಅವಳು ಅರ್ಧಸಿದ್ಧಾಸನದಲ್ಲಿ ಕುಳಿತು ಯಾವುದೋ ಪುಸ್ತಕ ಓದುವುದರಲ್ಲಿ ತಲ್ಲೀನಳಾಗಿದ್ದಳು. ಮೈ ತುಂಬಾ ಕಪ್ಪು ಬಟ್ಟೆ  ಧರಿಸಿದ್ದ ಅವಳು ಭಾರತೀಯಳಾಗಿರಲಿಲ್ಲ. ಒಂದು ಕೈಯಲ್ಲಿ ಜಪ ಮಾಲೆ ಹಿಡಿದಿದ್ದ ಅವಳು ತನ್ನ ಬಳಿ ಬಂದು ನಮಸ್ಕರಿಸಿದವರ ಹಣೆಗೆ ವಿಭೂತಿಯ ತಿಲಕ ಇಡುತ್ತಿದ್ದಳು. 



ನಾವು ಮಂಟಪವನ್ನು ದಾಟಿ ಮೇಲಿನ ಸ್ಮಶಾನವನ್ನು ಹೊಕ್ಕೆವು. ಒಂದು ಕೊನೆಯಲ್ಲಿ ಕೆಲವು ಸಾಧುಗಳು  ಗಾಂಜಾ ಸೇವನೆಯಲ್ಲಿ ತೊಡಗಿದ್ದರು. ಅಲ್ಲಿ ಕೆಲ ಕಾಲ ಇದ್ದು ಮತ್ತೆ ಮೆಟ್ಟಲು ಇಳಿಯುತ್ತಿದ್ದಾಗ ಸ್ಮಶಾನದ ಕರ್ಮಚಾರಿಯೊಬ್ಬ ಮಂಟಪದಲ್ಲಿ ಕುಳಿತಿದ್ದ ಸಾಧುವನ್ನು ತೋರಿಸುತ್ತ "ಅಘೋರಿ ಬಾಬಾ ಹೈ, ಜಾಯಿಯೇ" ಅಂದ. ನಾನು ನನ್ನ ಮಿತ್ರನೂ ಮಂಟಪವನ್ನು ಪ್ರವೇಶಿಸಿ ಅವಳ ಕಾಲಿಗೆ ಎರಗಿದೆವು. ಅವಳು ರೂಢಿಯಂತೆ ನಮ್ಮ ಹಣೆಗೆ ತಿಲಕವನ್ನಿಟ್ಟಳು. ಅವಳ ಪಕ್ಕದಲ್ಲಿ ಅವಳ ಸಹಾಯಕನಂತೆ ತೋರುತ್ತಿದ್ದ ಒಬ್ಬ ಭಾರತೀಯನಿದ್ದ. ಅವನೂ ಜಪದಲ್ಲಿ ನಿರತನಾಗಿದ್ದ. ಅವನ ಬಳಿ ನಾನು ಇಲ್ಲಿ ಕೂರಬಹುದೇ ಎಂದು ಕೇಳಿದೆ. ಅವನು ಹೌದೆಂದು ತಲೆಯಾಡಿಸಿದ. ನಾವಿಬ್ಬರು ಅಲ್ಲಿ ಧ್ಯಾನಬದ್ಧರಾಗಿ ಕುಳಿತೆವು.



ನಾವು ಅಲ್ಲಿ ಸುಮಾರು ಹತ್ತು ನಿಮಿಷದ ಆಸುಪಾಸು ಕಣ್ಣು ಮುಚ್ಚಿ ಕುಳಿತಿರಬಹುದು. ಮೆಲ್ಲನೆ ಕಣ್ಣು ತೆರೆದು ನಾನು ಸುತ್ತಲೂ ನೋಡಿದಾಗ ಯಾವುದೋ ಪರಲೋಕದಿಂದ ಮತ್ತೆ ಇಹಲೋಕಕ್ಕೆ ಬಂದ ಅನುಭವ. ಅವಳ ಪಕ್ಕದಲ್ಲಿ ಕುಳಿತ ಸಹಾಯಕನಲ್ಲಿ ಮೆಲ್ಲಗೆ "ಫೋಟೋ ಲೇ ಸಕ್ತೆ ಹೈ ಕ್ಯಾ?" ಎಂದು ಕೇಳಿದೆ. ಅವನು ಹೌದೆಂದು ತಲೆಯಾಡಿಸಿದ. ನಾನು ಸಿಕ್ಕಿದ ಅವಕಾಶವನ್ನು ಬಿಡದೆ ಎರಡು ಫೋಟೋ ಕ್ಲಿಕ್ಕಿಸಿದೆ. ಹಾಗೆಯೇ ನನ್ನ ಮುಂದೆ ಕುಳಿತಿದ್ದ ಅಘೋರಿ ಸಾಧುವನ್ನು ಸ್ವಲ್ಪ ಗಮನಿಸಿದೆ. ಅವಳ ಮುಖದಲ್ಲಿ ಒಂದು ಗಹನವಾದ ನೆಮ್ಮದಿಯಿತ್ತು. ಜಗತ್ತಿನ ಗೊಂದಲದ ನಡುವೆ ತನ್ನನ್ನು ತಾನು ಕಳೆಯದ ಸ್ಥಿರತೆಯಿತ್ತು. ನಾವು ಎದ್ದು ಹೊರಡುವಾಗ ನಾನು ಮತ್ತೊಮ್ಮೆ ವಂದಿಸಿದೆ. ಅವಳೂ ಕಣ್ಣಲ್ಲೇ ನಮ್ಮನ್ನು ಬೀಳ್ಕೊಟ್ಟಳು. 


ಮಂಟಪದಿಂದ ನಾಲ್ಕು ಮೆಟ್ಟಿಲು ಮೇಲೆ ನಾಲ್ಕು ಮೆಟ್ಟಿಲು ಕೆಳಗೆ ಕೆಲ ಮನುಷ್ಯರು ತಮ್ಮ ಇಹಯಾತ್ರೆ ಮುಗಿಸಿ ಪರಲೋಕಡೆಗೆ ಹೋಗಲು ಸಜ್ಜಾಗುತ್ತಿದ್ದರು. ಇವರ ಈ ಕಾರ್ಯವನ್ನು ಸಂಪನ್ನಗೊಳಿಸಲು ಅಲ್ಲಿ ಕಾರ್ಮಿಕರ ಸಂಬಂಧಿಕರ ಗೌಜಿ ನಡೆಯುತ್ತಿತ್ತು. ಇದರ ಜೊತೆಗೆ ಕಾಶಿ ವಿಶ್ವನಾಥನನ್ನು ಮಹಾಕುಂಭದ ಸಮಯದಲ್ಲಿ ನೋಡಲು ಬಂದ ಭಕ್ತರ ದಂಡೇ ಎಲ್ಲಿಲ್ಲದ ಗದ್ದಲ ಮಾಡುತ್ತಿದ್ದರು. ಎಲ್ಲೆಡೆ ಜನರ ಮಾತು, ಸದ್ದು ಕೇಳಿಸುತ್ತಿತ್ತು. ಆದರೆ ಇವುಗಳ ಯಾವುದೇ ಪರಿವೆಯಿಲ್ಲದೆ ಆ ತ್ರಿಶಂಕು ಮಂಟಪದಲ್ಲಿ ಕಣ್ಮುಚ್ಚಿ ಕುಳಿತ ಕೆಲ ನಿಮಿಷಗಳು  ನಾನು ಅನುಭವಿಸಿದ ಅಪೂರ್ವ ಮೌನದ ಕ್ಷಣಗಳಾಗಿತ್ತು.


No comments:

Post a Comment